Saturday, July 14, 2012

Kathopanishad in Kannada Chapter-01 Canto-03 Shloka 15-17


ಅಶಬ್ದಮಸ್ಪರ್ಶಮರೂಪಮವ್ಯಯಂ ತಥಾಽರಸಂ ನಿತ್ಯಮಗಂಧವಚ್ಚ ಯತ್
ಅನಾದ್ಯನಂತಂ ಮಹತಃ ಪರಂ ಧ್ರುವಂ ನಿಚಾಯ್ಯ ತನ್ಮೃತ್ಯುಮುಖಾತ್ ಪ್ರಮುಚ್ಯತೇ ೧೫

ಈ ಶ್ಲೋಕ ಮೊದಲ ಅಧ್ಯಾಯದ ಉಪಸಂಹಾರ ರೂಪದಲ್ಲಿದೆ. ಭಗವಂತನನ್ನು ಚಿಂತಿಸಲು ಪ್ರಾಕೃತವಾದ ಪ್ರಪಂಚದಿಂದ ಸ್ವಲ್ಪ ಬೇರೆಯಾದ ದೃಷ್ಟಿಕೋನ ಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಈ ಪ್ರಪಂಚದಲ್ಲಿ ನಮಗೆ ತಿಳಿದಿರುವುದು ಪಂಚಭೂತಗಳು ಮತ್ತು ಪಂಚತನ್ಮಾತ್ರೆಗಳು(ಗಂಧ, ರಸ, ರೂಪ, ಸ್ಪರ್ಶ, ಶಬ್ದ). ನಮ್ಮ ಎಲ್ಲಾ ಅನುಭವಗಳೂ ಕೂಡಾ ಈ ಐದು ವಿಷಯಗಳ ಸುತ್ತವೇ ಸುತ್ತುತ್ತಿರುತ್ತವೆ. ನಾವು ಈ ಐದು ವಿಷಯಗಳನ್ನು ದಾಟಿ ಹೋಗದೇ ಭಗವಂತ ತಿಳಿಯುವುದಿಲ್ಲ. ಭಗವಂತ ಭೌತಿಕವಾಗಿ ಮೂಸುವ, ರುಚಿಸುವ, ಕಾಣುವ, ಮುಟ್ಟುವ ಮತ್ತು ಕೇಳುವ ಯಾವ ಬಗೆಯಲ್ಲೂ ಇಲ್ಲ.  ನಾವು ಭೌತಿಕವಾಗಿ ಕಾಣುವ ಎಲ್ಲಾ ವಸ್ತುಗಳಿಗೂ ಹುಟ್ಟು-ಸಾವಿದೆ. ಆದರೆ ಭಗವಂತ ನಿತ್ಯ-ಸತ್ಯ. ಆತನಿಗೆ ತುದಿ-ಮೊದಲಿಲ್ಲ. ನಮ್ಮೆಲ್ಲರ ತಂದೆ ಆತ, ಆದರೆ ಆತನನ್ನು ಸೃಷ್ಟಿ ಮಾಡಿದ ಹಿರಿದಾದ ಶಕ್ತಿ ಇನ್ನೊಂದಿಲ್ಲ. ಇದಕ್ಕಾಗಿ ಪುರಂದರದಾಸರು “ನನಗೆ ನಿನ್ನಂತಹ ಅಪ್ಪನುಂಟು, ನಿನ್ನ ಅಪ್ಪನ ತೋರೋ” ಎಂದು ಹಾಡಿರುವುದು. ಜೀವಗಳಲ್ಲೇ ಶ್ರೇಷ್ಠತತ್ವವಾದ ಬ್ರಹ್ಮ-ವಾಯುವಿಗಿಂತಲೂ ಆಚೆಗಿರುವ, ಎಂದೂ ಬದಲಾಗದ ಅಂತಹ ಭಗವಂತನನ್ನು ನಿಶ್ಚಯವಾಗಿ, ಅರ್ಥಮಾಡಿಕೊಂಡು, ಸಾಕ್ಷಾತ್ಕರಿಸಿಕೊಂಡು, ಉಪಾಸನೆ ಮಾಡುವವರು ಎಂದೂ ಮೃತ್ಯುವಿನ ಸುಳಿಗೆ ಸಿಗುವುದಿಲ್ಲ. ಭಗವದ್ ಭಕ್ತರನ್ನು ತಡೆಯುವ ಅಧಿಕಾರ ನನಗೂ ಇಲ್ಲಾ ಎಂದಿದ್ದಾನೆ ಯಮ. ಭಾಗವತದಲ್ಲಿ ಬರುವ ಅಜಾಮಿಳನ ಕಥೆ ಇದಕ್ಕೆ  ಶ್ರೇಷ್ಠ ದೃಷ್ಟಾಂತ.

ಮೊದಲ ಅಧ್ಯಾಯದ ಕೊನೆಯಲ್ಲಿ ಯಮ ಇಲ್ಲಿ ವಿವರಿಸಿದ ಭಗವಂತನ ಜ್ಞಾನವನ್ನು ತಿಳಿದು ಉಪಾಸನೆ ಮಾಡುವುದರ ಫಲವನ್ನು ವಿವರಿಸಿದ್ದಾನೆ. ಮುಂದಿನ ಎರಡು ಶ್ಲೋಕ ಈ ಅಧ್ಯಾಯದ  ಫಲಶ್ರುತಿ ರೂಪದಲ್ಲಿದೆ.     

ನಾಚಿಕೇತಮುಪಾಖ್ಯಾನಂ ಮೃತ್ಯುಪ್ರೋಕ್ತಂ ಸನಾತನಮ್
ಉಕ್ತ್ವಾ ಶ್ರುತ್ವಾ ಚ ಮೇಧಾವೀ ಬ್ರಹ್ಮಲೋಕೇ ಮಹೀಯತೇ ೧೬

ಯಮ ಹೇಳುತ್ತಾನೆ: ಇದು ನಚಿಕೇತನಿಗೆ ಉಪದೇಶ ಮಾಡಿರುವ, ನಾಚಿಕೇತಾಗ್ನಿಯಲ್ಲಿ ಸನ್ನಿಹಿತನಾಗಿರುವ ಭಗವಂತನ ಉಪಾಖ್ಯಾನ(ಶ್ರೇಷ್ಠವಾದ ವಿವರಣೆ). ಮೃತ್ಯು ದೇವತೆಯಾದ ನಾನು ಹೇಳಿರುವ ಈ ಉಪಾಖ್ಯಾನ ಸನಾತನವಾದುದ್ದು.  ಅನಾದಿ-ಅನಂತ ಕಾಲದಲ್ಲೂ ಜ್ಞಾನಿಗಳು ಈ ಉಪಾಸನೆಯಿಂದಲೇ ಭಗವಂತನನ್ನು ಪಡೆದರು. ಎಂದೆಂದೂ ಇರುವ ಈ ಉಪಾಖ್ಯಾನದಲ್ಲಿ, ಈ ಉಪಾಸನೆಯಲ್ಲಿ ಬದಲಾವಣೆ ಇಲ್ಲ. ಎಲ್ಲಾ ಕಾಲದಲ್ಲೂ ಭಗವಂತನನ್ನು ಪಡೆಯಲು ಇರುವ ಏಕಮಾತ್ರ ವಿಧಾನವಿದು. ಇದನ್ನು ಹೇಳಿ ಮತ್ತು ಕೇಳಿ ಯಾರು ಜ್ಞಾನವನ್ನು ಬೆಳೆಸಿಕೊಳ್ಳುತ್ತಾರೋ ಅವರಿಗೆ ಭಗವದ್ ಲೋಕ ಪ್ರಾಪ್ತಿಯಾಗುತ್ತದೆ.

ಯ ಇಮಂ ಪರಮಂ ಗುಹ್ಯಂ ಶ್ರಾವಯೇದ್ ಬ್ರಹ್ಮಸಂಸದಿ
ಪ್ರಯತಃ ಶ್ರಾದ್ಧಕಾಲೇ ವಾ ತದಾನಂತ್ಯಾಯ ಕಲ್ಪತೇ
ತದಾನಂತ್ಯಾಯ ಕಲ್ಪತ ಇತಿ                               ೧೭

ಪರಮ ಗುಹ್ಯವಾದ ಈ ವಿದ್ಯೆ ಯೋಗ್ಯತೆ ಇಲ್ಲದವರಿಗೆ ಮತ್ತು ದುರುಪಯೋಗ ಮಾಡಿಕೊಳ್ಳುವವರಿಗೆ ಹೇಳುವಂತಹುದ್ದಲ್ಲ. “ಜ್ಞಾನಿಗಳ ಸಭೆಯಲ್ಲಿ ಈ ವಿದ್ಯೆಯ ಪ್ರವಚನ  ಮಾಡಿದರೆ ಅನಂತ ಫಲ” ಎನ್ನುತ್ತಾನೆ ಯಮ. ಶ್ರಾದ್ಧ ಕಾಲದಲ್ಲಿ ಜ್ಞಾನಿಗಳ ಸಮ್ಮುಖದಲ್ಲಿ  ಕಾಠಕೋಪನಿಷತ್ತಿನ ಪ್ರವಚನ ಬಹಳ ಶ್ರೇಷ್ಠ.
ಇಲ್ಲಿ ಎರಡು ಬಾರಿ “ತದಾನಂತ್ಯಾಯ ಕಲ್ಪತ” ಎನ್ನುವ ವಾಕ್ಯವನ್ನು ಬಳಸಲಾಗಿದೆ. ಇದು ಹಿಂದಿನ ಕಾಲದ ಸಂಪ್ರದಾಯ. ಒಂದು ಅಧ್ಯಾಯ ಮುಗಿಯಿತು ಎಂದು ತೋರಿಸಲು ಕೊನೇಯ ವಾಕ್ಯವನ್ನು ಎರಡು ಸಲ ಹೇಳುತ್ತಾರೆ. ಮೊದಲ ಅಧ್ಯಾಯ ಇಲ್ಲಿಗೆ ಮುಗಿಯಿತು ಎನ್ನುವುದು ಇದರ ಅರ್ಥ. ಇಲ್ಲಿಗೆ  ಯಮನ ಉಪದೇಶದ ಒಂದು ಘಟ್ಟ ಮುಗಿಯಿತು. 

ಇತಿ ಕಾಠಕೋಪನಿಷದಿ ಪ್ರಥಮಾಧ್ಯಾಯೇ ತೃತೀಯಾ ವಲ್ಲೀ
ಇಲ್ಲಿಗೆ ಕಾಠಕೋಪನಿಷತ್ತಿನ ಮೊದಲ ಅಧ್ಯಾಯ ಮುಗಿಯಿತು 

No comments:

Post a Comment