Wednesday, July 18, 2012

Kathopanishad in Kannada Chapter-02 Canto-01 Shloka-03

             ಯ ಏಷ ಸುಪ್ತೇಷು ಜಾಗರ್ತಿ ಕಾಮಂ ಕಾಮಂ ಪುರುಷೋ ನಿರ್ಮಿಮಾಣಃ
              ತದೇವ ಶುಕ್ರಂ ತದ್ಬ್ರಹ್ಮ ತದೇವಾಮೃತಮುಚ್ಯತೇ
              ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ ಏತದ್ವೈ ತತ್ ೨-೨-೮

ಭಗವಂತನ ಕುರಿತು ವಿವರಿಸುತ್ತಾ ಯಮ ಹೇಳುತ್ತಾನೆ: “ಭಗವಂತ ಎಲ್ಲರೂ ಮಲಗಿದ್ದಾಗಲೂ ತಾನು ಎಚ್ಚರವಾಗಿದ್ದು, ಪ್ರಪಂಚದ ಎಲ್ಲಾ ಕಡೆ ಇರುವ ಎಲ್ಲಾ ಜೀವರನ್ನು ನಿಯಂತ್ರಿಸುತ್ತಿರುತ್ತಾನೆ” ಎಂದು. ಎಲ್ಲರೂ ನಿದ್ರಿಸುವ ಸಮಯ ಪ್ರಳಯ ಕಾಲ. ಪ್ರಳಯ ಕಾಲದಲ್ಲೂ ಕೂಡಾ ಎಚ್ಚರವಾಗಿರುವ ಭಗವಂತ, ನಿರಂತರ ಸೃಷ್ಟಿ ಕ್ರಿಯೆಯಲ್ಲಿ ತೊಡಗಿ ಎಂದೂ ನಿದ್ದೆ ಮಾಡದ ನಿತ್ಯ ಚೈತನ್ಯ.   ಇಲ್ಲಿ ಯಮ ಭಗವಂತನನ್ನು ‘ಪುರುಷಃ’ ಎಂದು ಸಂಬೋಧಿಸಿದ್ದಾನೆ. ಶರೀರ ಎನ್ನುವ ಪುರದಲ್ಲಿರುವವ, ಬ್ರಹ್ಮಾಂಡವೆನ್ನುವ ಪುರದಲ್ಲಿರುವವ, ಇಡೀ ವಿಶ್ವವನ್ನು ವ್ಯಾಪಿಸಿ ನಿಂತವ-ಪುರುಷಃ ನಾಮಕ ಭಗವಂತ.
ದುಃಖವಿಲ್ಲದ, ಯಾವ ದೋಷದ ಸ್ಪರ್ಶವೂ ಇಲ್ಲದ ವಸ್ತು ಆ ಭಗವಂತನೊಬ್ಬನೇ. “ಇಂತಹ ಭಗವಂತನನ್ನು ‘ಬ್ರಹ್ಮ’ ಎಂದು ಕರೆಯುತ್ತಾರೆ” ಎನ್ನುತ್ತಾನೆ ಯಮ.  ಬ್ರಹ್ಮ ಎಂದರೆ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣವಾದುದ್ದು. ಗುಣದಿಂದ, ಕಾಲದಿಂದ, ದೇಶದಿಂದ ಪರಿಪೂರ್ಣನಾದ ಭಗವಂತ ‘ಬ್ರಹ್ಮಃ’. 
ನಾಶರಹಿತ ಆನಂದಮಯ ಆ ಭಗವಂತನೊಬ್ಬನೇ. ಇಡೀ ಪ್ರಪಂಚದಲ್ಲಿ ಚತುರ್ಮುಖನಿಂದ ಹಿಡಿದು ಒಂದು ಹುಲ್ಲುಗರಿಯ ತನಕ ಸಮಸ್ತ ಜೀವಜಾತವೂ ಕೂಡ ಆ ಅನಾಧಿ ಅನಂತವಾದ ನಿತ್ಯ-ತತ್ವವನ್ನು ಆಶ್ರಯಿಸಿಕೊಂಡಿವೆ. ಯಾರೂ ಕೂಡಾ ಭಗವಂತನನ್ನು ಮೀರಿ ಹೋಗುವುದು ಸಾಧ್ಯವಿಲ್ಲ. ಇಡೀ ವಿಶ್ವ ಭಗವಂತನಿಂದ ನಿಯತವಾಗಿದೆ ಮತ್ತು ಅವನ ಅಧೀನದಲ್ಲಿದೆ. “ನೀನು ತಿಳಿಯಬೇಕು ಎಂದಿರುವ ಬ್ರಹ್ಮತತ್ವ ಇವನೇ” ಎನ್ನುತ್ತಾನೆ ಯಮ.

ಯೇನ ರೂಪಂ ರಸಂ ಗಂಧಂ ಶಬ್ದಾನ್ ಸ್ಪರ್ಶಾಂಶ್ಚ ಮೈಥುನಾನ್
ಏತೇನೈವ ವಿಜಾನಾತಿ ಕಿಮತ್ರ ಪರಿಶಿಷ್ಯತೇ ಏತದ್ವೈ ತತ್            

ಮುಂದುವರಿದು ಯಮ ಹೇಳುತ್ತಾನೆ: ನಿನ್ನ ಒಂದೊಂದು ಇಂದ್ರಿಯಗಳ ಹಿಂದಿರುವ ಶಕ್ತಿಯ ಬಗ್ಗೆ ಯೋಚಿಸು. ಆಗ ಅದು ಅನಂತಶಕ್ತ ಭಗವಂತನ ಲೀಲೆ ಎಂದು ತಿಳಿಯುತ್ತದೆ” ಎಂದು. ನಮ್ಮ ಕಣ್ಣು ರೂಪವನ್ನು ಗ್ರಹಿಸುವ ಇಂದ್ರಿಯ. ಪ್ರಪಂಚದಲ್ಲಿರುವ ಅನಂತ ರೂಪವನ್ನು  ಬೇರೆಬೇರೆಯಾಗಿ ಪ್ರತ್ಯೇಕಿಸಿ ಗ್ರಹಿಸುವ ಶಕ್ತಿ ಕಣ್ಣಿಗಿದೆ. ನಾಲಿಗೆ ರಸವನ್ನು ಗ್ರಹಿಸುವ ಇಂದ್ರಿಯ. ಮೇಲ್ನೋಟದಲ್ಲಿ ನೋಡಿದರೆ ಒಂದು ಪುಟ್ಟ ಮಾಂಸದ ತುಂಡು. ಆದರೆ ಈ ನಾಲಿಗೆಯ ಹಿಂದಿರುವ ರಸಗ್ರಹಣ ಶಕ್ತಿ ಅದ್ಭುತವಾದುದ್ದು. ಒಂದೊಂದು ರಸವನ್ನೂ ಪ್ರತ್ಯೇಕಿಸಿ ಗ್ರಹಿಸುವ ಶಕ್ತಿ ಈ ನಾಲಿಗೆಗಿದೆ. ಮೂಗು ಗಂಧವನ್ನು ಗ್ರಹಿಸುವ ಇಂದ್ರಿಯ. ಪರಿಮಳಗಳಲ್ಲಿ ಅನೇಕಾನೇಕ ವಿಧ. ಈ ಪ್ರಪಂಚದಲ್ಲಿ ವಿಧವಿಧವಾದ ಹೂವುಗಳಿವೆ ಮತ್ತು ಅವುಗಳಿಗೆ ಬಗೆಬಗೆಯ ಕಂಪು. ಎಲ್ಲವನ್ನೂ ಬೇರೆಯಾಗಿ ಗ್ರಹಿಸುವ ಶಕ್ತಿ ನಮ್ಮ ಮೂಗಿಗಿದೆ.
ಕಣ್ಣು, ನಾಲಿಗೆ ಮತ್ತು ಮೂಗಿನ ಬಗ್ಗೆ ಹೇಳಿದ ಮೇಲೆ ಇಲ್ಲಿ ಕಿವಿಯ ಬಗ್ಗೆ ಹೇಳುವಾಗ ‘ಶಬ್ದಗಳು’ ಎಂದು ಬಹುವಚನದಲ್ಲಿ ಹೇಳಿದ್ದಾರೆ. ಕಾರಣ ಏನೆಂದರೆ ಪದ ಒಂದೇ ಆದರೂ ಕೂಡಾ ಅದನ್ನು ಉಚ್ಛರಿಸಿದಾಗ ಹೊರಹೊಮ್ಮುವ ಶಬ್ದದ ಬಗೆ ಒಂದೇ ಅಲ್ಲ. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಒಂದೇ ಪದವನ್ನು ಅನೇಕ ರೀತಿಯಲ್ಲಿ ಉಚ್ಛರಿಸುತ್ತಾರೆ. ಇದನ್ನು ಕಿವಿ ಪ್ರತ್ಯೇಕಿಸಿ ಗುರುತಿಸಬಲ್ಲುದು.
ಶಬ್ದದ ನಂತರ ಸ್ಪರ್ಶ. ನಮ್ಮ ಚರ್ಮ ಪ್ರತಿಯೊಂದು ಸ್ಪರ್ಷವನ್ನು ಬೇರೆಬೇರೆಯಾಗಿ ಗ್ರಹಿಸಿ ನಮಗೆ ಆ ಅನುಭವವನ್ನು ಕೊಡುತ್ತದೆ. ಸ್ಪರ್ಶದ ಪರಾಕಾಷ್ಠೆ ಗಂಡು ಹೆಣ್ಣಿನ ಪರಸ್ಪರ ಸ್ಪರ್ಶಸುಖ. ಇದು ಇಂದ್ರಿಯಗಳಲ್ಲೇ ಅತ್ಯಂತ ಗರಿಷ್ಠ ಅನುಭವ ಕೊಡುವಂತಹದ್ದು. ಆದ್ದರಿಂದ ಅದನ್ನು ಸ್ಪರ್ಶದಿಂದ ಪ್ರತ್ಯೇಕಿಸಿ ‘ಮೈಥುನ’ ಎಂದು ವಿಶೇಷವಾಗಿ ಇಲ್ಲಿ ಉಲ್ಲೇಖಿಸಿದ್ದಾರೆ.
ಯಾರಿಂದ ಈ ಇಂದ್ರಿಯಗಳು ನಮಗೆ ಅನಂತ ಅನುಭವಗಳನ್ನು ಕೊಡುತ್ತವೆ? ಎಲ್ಲಿಂದ ಬಂತು ಈ ಇಂದ್ರಿಯಗಳಿಗೆ ಈ ಶಕ್ತಿ? ಇವೆಲ್ಲವೂ ಆ ಭಗವಂತನ ಕೊಡುಗೆ. ಯಾರು ಎಲ್ಲರೂ ನಿದ್ರಿಸುವಾಗ ಎಚ್ಚರವಾಗಿರುತ್ತಾನೋ ಅದೇ ಭಗವಂತನೇ ಇಲ್ಲಿ ಇಂದ್ರಿಯಗಳ ಮೂಲಕ ಅನುಭವವನ್ನು ಕೊಡುತ್ತಾನೆ. ಅವನೇ ಮೋಕ್ಷದಲ್ಲಿ ನಮ್ಮ ಸ್ವರೂಪೇಂದ್ರಿಯಗಳ ಮೂಲಕ ದುಃಖದ ಸ್ಪರ್ಶವೇ ಇಲ್ಲದ ಆನಂದದ ಅನುಭವವನ್ನು ಕೊಡುತ್ತಾನೆ.  ಜೀವ ಸಂಸಾರ ಬಂಧವನ್ನು ಕಳಚಿಕೊಂಡು ಹೋದ ಮೇಲೆ ಜೀವನೊಂದಿಗೆ ಉಳಿಯುವವನು ‘ಆ ಭಗವಂತ’.

No comments:

Post a Comment