Friday, July 27, 2012

Kathopanishad in Kannada Chapter-02 Canto-01 Shloka-14-15


ಯಥೋದಕಂ ದುರ್ಗೇ ವೃಷ್ಟಂ ಪರ್ವತೇಷು ವಿಧಾವತಿ
ಏವಂ ಧರ್ಮಾನ್ ಪೃಥಕ್ ಪಶ್ಯಂಸ್ತಾನೇವಾನುವಿಧಾವತಿ ೧೪

ಭಗವಂತನ ಗುಣಧರ್ಮವನ್ನು ಬೇರೆಬೇರೆಯಾಗಿ ಚಿಂತನೆ ಮಾಡಬಾರದು ಎನ್ನುವುದನ್ನು ಇನ್ನೂ ಒತ್ತುಕೊಟ್ಟು ಈ ಶ್ಲೋಕದಲ್ಲಿ ಯಮ ವಿವರಿಸಿದ್ದಾನೆ.  ಜ್ಞಾನಾನಂದಾದಿಗಳನ್ನು ಭಗವಂತನಿಂದ ಭಿನ್ನ ಎಂದು ಉಪಾಸನೆ ಮಾಡುವವರು ಹೇಗೆ ಎತ್ತರವಾದ ಹಾಗೂ ದುರ್ಗಮವಾದ ಪರ್ವತದ ತುದಿಯಲ್ಲಿ ಸುರಿದ ನೀರು ಹರಿದು ಕೆಳಗೆ ಬರುತ್ತದೋ, ಹಾಗೇ ಭಗವಂತನ ವಿರುದ್ಧದಿಕ್ಕಿನಲ್ಲಿ ಚಲಿಸಿ ತಮಸ್ಸನ್ನು ಸೇರುತ್ತಾರೆ ಎಂದಿದ್ದಾನೆ ಯಮ.
ಭಗವಂತ ಜ್ಞಾನಾನಂದಸ್ವರೂಪ. ಆದ್ದರಿಂದ ಅವನಲ್ಲಿ ಯಾವ ರೀತಿಯ ತಾರತಮ್ಯ ಚಿಂತನೆ ಮಾಡಬಾರದು. ನಾವು ಒಂದು ಕ್ರಿಯೆ ಮಾಡಬೇಕಿದ್ದರೆ ಮೊದಲು ಅದರ ಬಗ್ಗೆ ತಿಳಿದುಕೊಳ್ಳುತ್ತೇವೆ. ನಂತರ ತಿಳಿದುಕೊಂಡು ಮಾಡುತ್ತೇವೆ. ನಮ್ಮ ಇಚ್ಛೆ-ಜ್ಞಾನ-ಕ್ರಿಯೆ ಇವು ಮೂರನ್ನು ತ್ರಿನೇತ್ರ ಎನ್ನುತ್ತಾರೆ. ಆದರೆ ಭಗವಂತನಲ್ಲಿ ಇವು ಮೂರು ಬೇರೆಬೇರೆ ಅಲ್ಲ. ಆತನಲ್ಲಿ ಜ್ಞಾನ-ಇಚ್ಛೆ-ಕ್ರಿಯೆ ಎಲ್ಲವೂ ಅಖಂಡ. ಇಷ್ಟೇ ಅಲ್ಲದೇ ಭಗವಂತನ ಅವಯವಗಳೂ ಕೂಡ ಸ್ವರೂಪಭೂತವಾಗಿ ಅಖಂಡವಾದುದು. ಅವನ ಕೈ-ಕಾಲು-ಕಣ್ಣು ಎಲ್ಲವೂ ಬೇರೆಬೇರೆ ಅಲ್ಲ. ಅದೊಂದು ಅಖಂಡವಾದ ವಿಲಕ್ಷಣವಾದ ಶಕ್ತಿ. ಆತ ಕಾಲದಿಂದ ಅಂತವಿಲ್ಲದವನು; ದೇಶದಿಂದ ಅಂತವಿಲ್ಲದವನು; ಗುಣಗಳಿಂದ ಅಂತವಿಲ್ಲದವನು ಹಾಗೂ ಶಕ್ತಿಯಲ್ಲಿ ಅಂತವಿಲ್ಲದವನು. ಇದು ನಾವು ಯೋಚಿಸಲೂ ಸಾಧ್ಯವಾಗದ ಭಗವಂತನ ಗುಣಧರ್ಮ.

ಯಥೋದಕಂ ಶುದ್ಧೇ ಶುದ್ಧಮಾಸಿಕ್ತಂ ತಾದೃಗೇವ ಭವತಿ
ಏವಂ ಮುನೇರ್ವಿಜಾನತ ಆತ್ಮಾ ಭವತಿ ಗೌತಮ ೧೫

ಹೇಗೆ ಭಗವಂತನ ಗುಣಧರ್ಮಗಳನ್ನು ಬೇರೆಬೇರೆಯಾಗಿ ಚಿಂತನೆ ಮಾಡಬಾರದೋ, ಹಾಗೇ ಎಲ್ಲವೂ ಭಗವಂತನ ಸ್ವರೂಪ ಎಂದೂ ಚಿಂತನೆ ಮಾಡಬಾರದು. ಭಗವಂತನ ಉಪಾಸನೆ ಮಾಡುವವರು ಭಗವಂತನೇ ಆಗಿಬಿಡುತ್ತಾರೆ ಎನ್ನುವ ಚಿಂತನೆ ಸಲ್ಲದು. ಜ್ಞಾನಾನಂದಮಯನಾದ ಜೀವ ಮೋಕ್ಷದಲ್ಲಿ ಜ್ಞಾನಾನಂದಮಯನಾದ ಭಗವಂತನನ್ನು ಸೇರುತ್ತಾನೆ. ಅಲ್ಲಿ ಜೀವ ಮತ್ತು ಭಗವಂತ ಒಂದಾಗುತ್ತಾರೆ. ಇಲ್ಲಿ ಒಂದಾಗುವುದು ಎಂದರೆ ಒಟ್ಟಾಗುವುದು, ಒಂದೇ ಆಗುವುದಲ್ಲ. ಶುದ್ಧವಾದ ಎರಡು ಲೋಟ ನೀರನ್ನು ಬೆರೆಸಿದರೆ ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೆ ಒಂದಾಗುವುದು. ಭಗವಂತನನ್ನು ಕಂಡ ಜ್ಞಾನಿಯ ಸ್ವರೂಪ ಭಗವಂತನ ಜೊತೆಗೆ ಸೇರಿಕೊಳ್ಳುವುದೇ ಹೊರತು ಭಗವಂತನೇ ಆಗುವುದಲ್ಲ.
ಮೋಕ್ಷವನ್ನು ಸೇರಿದ ಜೀವರು ಮಾನಸಿಕವಾಗಿಯೂ ಕೂಡ ಭಗವಂತನೊಡನೆ ಒಂದಾಗಿರುತ್ತಾರೆ. ಅಂದರೆ ಭಗವಂತನಿಗೂ ಹಾಗು ಅವನ ಭಕ್ತರಿಗೂ ಅಲ್ಲಿ ಅಭಿಪ್ರಾಯ ಭೇದವಿರುವುದಿಲ್ಲ. ಮೋಕ್ಷದಲ್ಲಿ ಸ್ತ್ರೀಯರಿದ್ದಾರೆ, ಪುರುಷರಿದ್ದಾರೆ. ಅಲ್ಲಿ ಅಜ್ಞಾನ-ದುಃಖವಿಲ್ಲ. ಎಲ್ಲರೂ ಜ್ಞಾನಾನಂದ ಸ್ಥಿತಿಯಲ್ಲಿ ಭಗವಂತನೊಂದಿಗಿರುತ್ತಾರೆ. “ಇವರೆಲ್ಲರನ್ನೂ ನಿಯಮಿಸುವ ಸ್ವಾಮಿ ನೀನು ತಿಳಿಯ ಬಯಸಿರುವ ಆ ಭಗವಂತ” ಎನ್ನುತ್ತಾನೆ ಯಮ.   

ಇತಿ ಕಾಠಕೋಪನಿಷದಿ ದ್ವಿತೀಯಾಧ್ಯಾಯೇ ಪ್ರಥಮಾ ವಲ್ಲೀ
ಇಲ್ಲಿಗೆ ಕಾಠಕೋಪನಿಷತ್ತಿನ ಎರಡನೇ ಅಧ್ಯಾಯದ ಮೊದಲ ವಲ್ಲೀ ಮುಗಿಯಿತು

No comments:

Post a Comment