Sunday, August 12, 2012

Kathopanishad in Kannada Chapter-02 Canto-03 Shloka-02-03


ಯದಿದಂ ಕಿಂ ಚ ಜಗತ್ ಸರ್ವಂ ಪ್ರಾಣ ಏಜತಿ ನಿಃಸೃತಮ್
ಮಹದ್ಭಯಂ ವಜ್ರಮುದ್ಯತಂ ಯ ಏತದ್ವಿದುರಮೃತಾಸ್ತೇ ಭವಂತಿ    

ಭಗವಂತನಿಂದ ನಿರ್ಮಿತವಾದ ಈ ಸಮಸ್ತ ಜಗತ್ತೂ ಕೂಡಾ ಚಲನಶೀಲವಾಗಿದೆ. ಆಕಾಶದಲ್ಲಿ ಗ್ರಹ-ಗೋಲಗಳು ನಿರ್ಧಿಷ್ಟವಾಗಿ ನಿಂತು ನಿಯಮಿತವಾಗಿ ಚಲಿಸುತ್ತಿವೆ. ಯಾರು ಇದನ್ನು ಧರಿಸಿದವನು? ಯಾರಿಂದ ಈ ಜಡಲೋಕಕ್ಕೆ ಚಲನೆ ಬಂತು? ಈ ಪ್ರಶ್ನೆಗೆ ಉತ್ತರ ಈ ಶ್ಲೋಕದಲ್ಲಿದೆ. ಇಡೀ ಪ್ರಪಂಚದ ಕ್ರಿಯಾ-ಕಲಾಪಗಳನ್ನು ನಿರ್ವಹಿಸುವವನು ಪ್ರಾಣಾಂತರ್ಗತ ಭಗವಂತ. ಪ್ರಾಚೀನರು ಹೇಳುವಂತೆ: ಇಡೀ ಬ್ರಹ್ಮಾಂಡವನ್ನು ಶೇಷ(ಸಂಕರ್ಷಣ) ಧಾರಣೆ ಮಾಡಿದ್ದಾನೆ. ಇಂತಹ ಶೇಷನನ್ನು ಪ್ರಾಣ ಧಾರಣೆ ಮಾಡಿದ್ದಾನೆ. ಪ್ರಾಣನನ್ನು ಭಗವಂತ ಧಾರಣೆ ಮಾಡಿದ್ದಾನೆ.    ಎಲ್ಲವೂ ಸರ್ವಚೇಷ್ಟಕನಾದ ಭಗವಂತನನ್ನು ಅವಲಂಭಿಸಿ ನಿಂತಿವೆ.
ಜಡ ತಾನೇ ತಾನಾಗಿ ಚಲಿಸುವುದಿಲ್ಲ. ಅದು ಚಲಿಸಬೇಕಾದರೆ ಅದಕ್ಕೆ ಚಲನಶಕ್ತಿ ಕೊಡುವ ಚೇತನ ಒಂದಿರಬೇಕು. ಚೇತನವಿಲ್ಲದೇ ಯಾವುದೇ ಕ್ರಿಯೆ ನಿಷ್ಫನ್ನವಾಗುವುದಿಲ್ಲ. ಇಂದಿನ ವಿಜ್ಞಾನದಲ್ಲಿ ಭೂಮಿ ಅಥವಾ ಇತರ ಗ್ರಹ ಗೋಲಗಳು ಏಕೆ ನಿಯಮಿತವಾಗಿ ತಮ್ಮ ಕಕ್ಷೆಯಲ್ಲಿ ನಿಂತು ತಿರುಗುತ್ತಿವೆ ಎನ್ನುವುದಕ್ಕೆ ಉತ್ತರವಿಲ್ಲ. ‘ಪ್ರತಿಯೊಂದು ವಸ್ತುವಿನ ಹಿಂದೆ ಒಂದು ಚೈತನ್ಯ ಶಕ್ತಿ ಅಡಗಿದೆ.  ಅದನ್ನೇ  ಆ ವಸ್ತುವಿನ ಅಭಿಮಾನಿ ದೇವತೆ ಎನ್ನುತ್ತಾರೆ. ಆ ಚೈತನ್ಯವೇ ಜಡ ವಸ್ತುವಿಗೆ ಚಲನೆ ಕೊಡುವ ಶಕ್ತಿ’. ಇದು  ನಮ್ಮ ಪ್ರಾಚೀನರು ಬಹಳ ಹಿಂದೆ ಕಂಡುಕೊಂಡ ಸತ್ಯ. ಉದಾಹರಣೆಗೆ ಬೆಂಕಿಯ ಅಭಿಮಾನಿ ದೇವತೆ ಅಗ್ನಿ, ಮಳೆಯ ಅಭಿಮಾನಿ ದೇವತೆ ಪರ್ಜನ್ಯ ಇತ್ಯಾದಿ.  ಇಂತಹ ಅನೇಕ ಚೇತನಗಳಿಗೆ ಶಕ್ತಿ ಕೊಡುವ ಮೂಲ ಚೇತನ ಆ ಭಗವಂತ.
ಎಲ್ಲಾ ದೇವತೆಗಳು ವಿಧಿ ನಿಯತಿಯ ಭಯದಲ್ಲಿ ಬದ್ಧತೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿ ಭಯ ಎಂದರೆ ಭಗವಂತನ ಮಹಿಮೆಯನ್ನರಿತು ಬದ್ಧತೆಯಿಂದ ಕಾರ್ಯ ನಿರ್ವಹಿಸುವುದು. ತಮ್ಮ ಕರ್ತವ್ಯ ಕರ್ಮವನ್ನು ಪ್ರಾಮಾಣಿಕವಾಗಿ ಮಾಡುವವರಿಗೆ ಭಗವಂತ ಕರುಣಾಳು. ಆದರೆ ದುರ್ಜನರಿಗೆ ಆತ ಮಹಾ ಭಯಂಕರ. ತಪ್ಪು ಮಾಡುವವರನ್ನು ಆತ ನಿಸ್ಸಂಕೋಚವಾಗಿ ಶಿಕ್ಷಿಸುತ್ತಾನೆ. ಇದಕ್ಕೆ ಮಹಾಭಾರತದ ಕೆಲವು ಘಟನೆಗಳೇ ಸಾಕ್ಷಿ. ದುಷ್ಟ ದುರ್ಯೋಧನನ ಬೆಂಬಲಕ್ಕೆ ನಿಂತು, ಒಂಟಿ ಅಭಿಮನ್ಯುವನ್ನು ನಿರ್ಧಯವಾಗಿ ಬೆನ್ನ ಹಿಂದೆ ಬಂದು ಬಡಿದು ಕೊಂದ ಕರ್ಣನನ್ನು ಕೃಷ್ಣ ಅದೇ ರೀತಿಯಲ್ಲಿ ಶಿಕ್ಷಿಸುತ್ತಾನೆ.  ಅದೇ ರೀತಿ ದುರ್ಯೋಧನ. ತುಂಬಿದ ಸಭೆಯಲ್ಲಿ ತನ್ನ ತೊಡೆಯ ಮೇಲೆ ಬಂದು ಕೂರುವಂತೆ ದ್ರೌಪದಿಯನ್ನು ಆಗ್ರಹಿಸಿದ ತಪ್ಪಿಗಾಗಿ, ಭೀಮನ ಮೂಲಕ ಆತನ ತೊಡೆಯನ್ನು ಮುರಿಸುತ್ತಾನೆ ಕೃಷ್ಣ. ಮೇಲ್ನೋಟಕ್ಕೆ ಇವೆಲ್ಲವೂ ಅಧರ್ಮ ಎನಿಸುತ್ತದೆ. ಆಳವಾಗಿ ನೋಡಿದರೆ ವಿಶ್ವದ ಮೂಲ ನಿಯಮ ಒಂದಿದೆ. ಯಾರು ಅಧರ್ಮ ಮಾಡಿದ್ದಾರೋ ಅವರಿಗೆ ಧರ್ಮದ ಸಾವು ಅಪೇಕ್ಷಿಸುವ ಹಕ್ಕು ಇರುವುದಿಲ್ಲ. ಅಂತವರನ್ನು ನಿರ್ಧಯವಾಗಿ ಸಂಹಾರ ಮಾಡುವುದೇ ಧರ್ಮ.
ಭಗವಂತ ದುಷ್ಟರಿಗೆ ಎಷ್ಟು ಭಯಾನಕ ಎಂದರೆ: ಆತ ಎತ್ತಿ ಹಿಡಿದ ವಜ್ರಾಯುಧ. ಲೋಕದಲ್ಲಿ ವಜ್ರಾಯುಧ ಎಂದರೆ ಸಿಡಿಲು. ಶತ್ರುಗಳ ಪಾಲಿಗೆ ಸಿದ್ಧವಾಗಿ ನಿಂತ ಬರಸಿಡಿಲು ಆ ಭಗವಂತ. ‘ವಜ್ರ’ ಎನ್ನುವುದರ ಶಬ್ದ ನಿಷ್ಫತ್ತಿ  ‘ವೃಜತಿ ಇತಿ ವಜ್ರಃ’. ಅಂದರೆ ಶತ್ರುಗಳು ಎಲ್ಲೇ ಇರಲಿ, ಅವರನ್ನು ಹುಡುಕಿ  ಸಂಹಾರ ಮಾಡುವ ಶಕ್ತಿ. ತತ್ವಶಾಸ್ತ್ರದಲ್ಲಿ ವಜ್ರ ಎನ್ನುವ ಪದಕ್ಕೆ ಇನ್ನೊಂದು ಅರ್ಥವಿದೆ. ‘ವರ್ಜಯತೀತಿ ವಜ್ರಃ’. ಅಂದರೆ   ಸಜ್ಜನರನ್ನು ಕಾಪಾಡುವ, ನಿರ್ದುಷ್ಟವಾದ, ಸ್ವಯಂ ದೋಷಗಳಿದ ದೂರನಾದ, ದುರ್ಜನರ ಪಾಲಿಗೆ ಅತ್ಯಂತ ಭಯಾನಕವಾದ ಶಕ್ತಿ ಆ ಭಗವಂತ.
ಇಲ್ಲಿ ನಮಗೊಂದು ಪ್ರಶ್ನೆ ಬರಬಹುದು. ದೇವರು ಭಯಾನಕ ಎಂದು ಏಕೆ ಹೇಳಿದ್ದಾರೆ ಎಂದು. ಏಕೆಂದರೆ ತಪ್ಪು ಮಾಡಿದವನಿಗೆ ಭಗವಂತನ ಲೋಕದಲ್ಲಿ ಎಂದೂ ಕ್ಷೆಮೆ ಇಲ್ಲ. ಅವನು ಶಿಕ್ಷೆ ಅನುಭವಿಸಲೇ ಬೇಕು. ನಾನು ಬಿತ್ತಿದ್ದನ್ನು ನಾನು ಅನುಭವಿಸಲೇ ಬೇಕು ಎನ್ನುವ ಎಚ್ಚರಕ್ಕಾಗಿ ಇಲ್ಲಿ ಹೀಗೆ ಹೇಳಿದ್ದಾರೆ. ಈ ಶ್ಲೋಕ – ಒಳ್ಳೆಯದನ್ನು ಮಾಡಬೇಕು, ಮಾಡಿ ಜ್ಞಾನ ಮಾರ್ಗದಲ್ಲಿ ಮುಂದೆ ಸಾಗಬೇಕು ಎನ್ನುವ ಸಂದೇಶವನ್ನು ಕೊಡುತ್ತದೆ. ಇದನ್ನು ಯಾರು ತಿಳಿಯುತ್ತಾರೆ, ತಿಳಿದು ಭಗವಂತನ ಮಾರ್ಗದಲ್ಲಿ ಸಾಗುತ್ತಾರೆ, ಅವರು ಸಾವಿಲ್ಲದ ಸ್ಥಿತಿಯನ್ನು ಪಡೆಯುತ್ತಾರೆ.
ಹಿಂದೆ ಹೇಳಿದಂತೆ ಎಲ್ಲಾ ದೇವತೆಗಳೂ ಭಗವಂತನ ನಿಯತಿಗೆ ಹೆದರಿ ತಮ್ಮ ಕರ್ತವ್ಯವನ್ನು ನಿಯಮಬದ್ಧವಾಗಿ ಮಾಡುತ್ತಾರೆ. ಇದನ್ನು ಇನ್ನೂ ಸ್ಪಷ್ಟವಾಗಿ ಮುಂದಿನ ಶ್ಲೋಕದಲ್ಲಿ ಯಮ ವಿವರಿಸುತ್ತಾನೆ.      

ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ
ಭಯಾದಿಂದ್ರಶ್ಚ ವಾಯುಶ್ಚ ಮೃತ್ಯುರ್ಧಾವತಿ ಪಂಚಮಃ                  

ಇದೇ ಅರ್ಥವನ್ನು ಕೊಡುವ ಶ್ಲೋಕ ತೈತ್ತಿರೀಯ ಉಪನಿಷತ್ತಿನಲ್ಲಿ ಕೂಡಾ ಬರುತ್ತದೆ. ಅಲ್ಲಿ ಹೇಳುತ್ತಾರೆ: ಭೀಷಾSಸ್ಮಾದ್ವಾತಃ ಪವತೇ ಭೀಷೋದೇತಿ ಸೂರ್ಯಃ ಭೀಷಾSಸ್ಮಾದಗ್ನಿಶ್ಚೇಂದ್ರಶ್ಚ ಮೃತ್ಯುರ್ಧಾವತಿ ಪಂಚಮ ಇತಿ [ಬ್ರಹ್ಮಾನಂದವಲ್ಲಿ ಎಂಟನೇ ಅನುವಾಕ]. “ಭಗವಂತನ ಭಯದಿಂದಲೇ ಅಗ್ನಿ, ಸೂರ್ಯ, ಇಂದ್ರ, ವಾಯು, ಯಮ, ಎಲ್ಲರೂ ನಿಯಮಬದ್ಧವಾಗಿ ಕಾರ್ಯ ನಿರ್ವಹಿಸುತ್ತಾರೆ” ಎನ್ನುತ್ತಾನೆ ಯಮ. ಇದೇ ವಿವರಣೆ ಗೀತೆಯಲ್ಲಿ ಕೂಡಾ ಬಂದಿದೆ.  ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ  । ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ॥ [ಅ-೯ ಶ್ಲೋ-೧೯]. ಅಲ್ಲಿ ಭಗವಂತ ಹೇಳುತ್ತಾನೆ: “ನಾನು ಸುಡುತ್ತೇನೆ. ನಾನು ಮಳೆ ಬರದಂತೆ ತಡೆಯುತ್ತೇನೆ; ಮಳೆಗರೆಸುತ್ತೇನೆ. ಸಾವು ಬರದಂತೆ ಮಾಡುತ್ತೇನೆ; ಸಾಯಿಸುತ್ತೇನೆ. ಓ ಅರ್ಜುನ, ಕಾಣುವ ಕಾರ್ಯ, ಕಾಣದ ಕಾರಣ ಎಲ್ಲವೂ ನನ್ನಿಂದ” ಎಂದು. ಹೀಗೆ ಬ್ರಹ್ಮಾದಿ ಸಮಸ್ತ ದೇವತೆಗಳೂ ಭಗವಂತನ ನಿಯತಿಗೆ ಬದ್ಧರಾಗಿ, ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಾರೆ. ಎಲ್ಲರ ಧಾರಕಶಕ್ತಿಯಾಗಿ ಭಗವಂತ ಈ ಪ್ರಪಂಚವೆಂಬ ವೃಕ್ಷವನ್ನು ನಿಯಮಿಸುತ್ತಾನೆ.  

No comments:

Post a Comment